ದೇವಭೂಮಿಯ ಮಹಾಪತನ
ಕೇರಳದ ಪಾಲಕ್ಕಾಡು ಜಿಲ್ಲೆಯ ರಾಯಿರ ನೆಲ್ಲೂರು ಬೆಟ್ಟಗಳಲ್ಲಿ ನಾರಾನಾಥು ಬ್ರಾಂಥನ್ ಎಂಬ ಸನ್ಯಾಸಿ ವಾಸಿಸುತ್ತಿದ್ದ. ಆತನಿಗೊಂದು ವಿಲಕ್ಷಣ ಅಭ್ಯಾಸವಿತ್ತು. ಆಗಾಗ ದೊಡ್ಡ ಕಲ್ಲುಗಳನ್ನು ಬೆಟ್ಟದ ಮೇಲೆ ಉರುಳಿಸಿಕೊಂಡು ಹೋಗಿ ಬೆಟ್ಟದ ಮೇಲಿಂದ ಕೆಳಗೆ ಉರುಳಿಸಿ ಕಲ್ಲು ಉರುಳುವುದನ್ನು ನೋಡುತ್ತಾ ಚಪ್ಪಾಳೆ ತಟ್ಟಿ ಕೇಕೆ ಹಾಕಿ ನಗುತ್ತಿದ್ದ. ಈ ಹುಚ್ಚು ಸನ್ಯಾಸಿಯ ಬಂಡೆ ಉರುಳಿಸುವ ಆಟವು ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ಆಳವಾಗಿ ಗಮನಿಸಿದಾಗ ಇದು ಮನುಷ್ಯನ ದುರಾಸೆ ಹಾಗೂ ಸ್ವಾರ್ಥದ ಪರಿಣಾಮ ಪ್ರಸ್ತುತ ಪಶ್ಚಿಮಘಟ್ಟದಲ್ಲಿ ಸಂಭವಿಸುತ್ತಿರುವ ಹಲವು ದುರ್ಘಟನೆಗಳ ಸಂಕೇತದಂತೆ ಕಾಣುತ್ತದೆ. ಕೇರಳ ಮತ್ತು ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ 2018 ರ ನಂತರ ಮತ್ತೆ ಮತ್ತೆ ಸಂಭವಿಸುತ್ತಿರುವ ಪ್ರವಾಹ, ಭೂ ಕುಸಿತವು ಬಹುಶಃ ಭವಿಷ್ಯದ ಕಠೋರ ದಿನಗಳ ಮುನ್ನುಡಿ. ನಾವೀಗಾಗಲೇ ಸಾಕಷ್ಟು ಬಂಡೆಗಳನ್ನು ಬೆಟ್ಟದ ಮೇಲಿನಿಂದ ಉರುಳಿಸಿದ್ದೇವೆ. ಹೀಗಾಗಿ, ಮುಂದೆ ಬರಲಿರುವ ವಿಪತ್ತು ಬಹುಶಃ ನಮಗೆ ಬೇರೇನೂ ಉಳಿಸುವುದಿಲ್ಲ. ಅವಶೇಷಗಳನ್ನು ಹೊರತುಪಡಿಸಿ! ಫ್ಲಡ್ ಆ್ಯಂಡ್ ಫ್ಯೂರಿ' ಎಂಬ ಇಂಗ್ಲಿಷ್ ಕೃತಿಯು ಪಶ್ಚಿಮಘಟ್ಟದಲ್ಲಿ ಉರುಳುತ್ತಿರುವ ಇಂಥಾ ಅಸಂಖ್ಯಾತ ಘಾತಕ ಬಂಡೆಗಳ ಕುರಿತು ಅಧ್ಬುತವಾಗಿ ವಿವರಿಸುತ್ತಾ ಹೋಗುತ್ತದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ, ನಮ್ಮ ಮಲೆನಾಡಿನಲ್ಲಿ ಯಾಕೆ ಮತ್ತೆ ಮತ್ತೆ ಭೂ ಕುಸಿತ ಸಂಭವಿಸುತ್ತಿದೆ. ಅಕಾರಣ ಬರ, ಅನಿಯಮಿತ ಮಳೆ ಯಾಕಾಗುತ್ತಿದೆ ಎಂಬುದರ ಕುರಿತು ಸಾಕ್ಷಿ ಸಮೇತ ತೆರೆದಿಡುತ್ತಾ ಹೋಗುತ್ತದೆ. ಇಂಥಾ ಅಸಾಧಾರಣ ಕೃತಿಯನ್ನು ಕನ್ನಡಕ್ಕೆ ತಂದಿದ್ದೇನೆ. ನಾವು ಪಶ್ಚಿಮ ಘಟ್ಟಗಳ ಮಕ್ಕಳು ತುರ್ತಾಗಿ ಈ ಸಂಗತಿಗಳನ್ನು ಅರಿಯಬೇಕೆಂಬ ಅದಮ್ಯ ಕಾಳಜಿಯಿಂದ ಈ ಪುಸ್ತಕವನ್ನು ರೂಪಿಸಿದ್ದೇನೆ. ಈ ಪುಸ್ತಕವನ್ನು ನೀವೊಮ್ಮೆ ಓದಲೇಬೇಕು ಮತ್ತು ನಿಮ್ಮ ಮಕ್ಕಳಿಗೂ, ಸ್ನೇಹಿತರಿಗೂ ಓದಿಸಬೇಕು. ಮಲೆನಾಡು ಹಿಂದೆಂದೂ ಕಾಣದ ಪ್ರಾಕೃತಿಕ ಅಸಮತೋಲನದ ಅಪಾಯದ ಗೆರೆಗೆ ಬಂದು ನಿಂತಿರುವ ಸಂದರ್ಭದಲ್ಲಿ ಇದನ್ನೆದುರಿಸಲು ಬೇಕಿರುವ ಅರಿವೊಂದೇ ನಮ್ಮನ್ನು ಕಾಪಾಡಬಲ್ಲುದು.
Variants (1)
- Default Title — 325.00 INR — In stock
AI Readiness
Good foundation, but some important product data is still missing.